10 March 2011

ಪ್ರತಿಬಿಂಬ

ಸುಂದರವಾಗಿ ಕಾಣುವ ಆಸೆ ಯಾರಿಗಿಲ್ಲ? ಇಂದಿನ ಸಮಾಜದಲ್ಲಿ ನೋಟಕ್ಕೆ ಪ್ರಾಮುಖ್ಯತೆ.
ಈ ಆಸೆಗೆ ಕನ್ನಡಿಯೂ ಒಂದು ಕಾರಣ. ಅದೇ ಒಂದು ಪರಿಹಾರ ಕೂಡ.
ಪುರಾಣಗಳಲ್ಲೂ ಕನ್ನಡಿಯ ಉಲ್ಲೇಖಗಳಿವೆ. ಶ್ರೀರಾಮ ಬಾಲ್ಯದಲ್ಲಿ ಚಂದಿರ ಬೇಕೆಂದು ಹಠ ಹಿಡಿದಾಗ
ಕನ್ನಡಿಯ ಬಳಸಿದ ಕಥೆ ಗೊತ್ತೇ ಇದೆ. ಇನ್ನು ಕರ್ನಾಟಕದ ಸುಂದರ ಶಿಲ್ಪ-ದರ್ಪಣ ಸುಂದರಿ-ಕನ್ನಡಿಗೂ
 ಕನ್ಯೆಯರಿಗೂ ಇರುವ ಅನನ್ಯ ಬಂಧದ ನಿದರ್ಶನ. ದರ್ಪಣ ಎಂಬ ಶಬ್ದದಲ್ಲೇ ದರ್ಪ ಇರುವುದರಿಂದ
 ಸುಂದರಿಯರ ದರ್ಪದ ಮೂಲ ಕನ್ನಡಿಯೇ ಇರಬೇಕೆಂದು ನನ್ನ ಶಂಕೆ. ಕನ್ಯೆಯಯರ ಜಂಭದ ಚೀಲದಲ್ಲಿ
ಕನ್ನಡಿಗೆ ಮೊದಲ ಸ್ಥಾನ. ಇನ್ನು ಇವರು ಕನ್ನಡಿಯೆದೆರು ನಿಂತರೆ ಸಮಯಕ್ಕೂ ಬೇಸರ.

  ಕನ್ನಡಿ ಕಥೆ, ಕವನ ಮತ್ತು ಜನಪದದಲ್ಲೂ ವಿಶಿಷ್ಟ ಸ್ಥಾನ ಪಡೆದಿದೆ. ಅಮೂರ್ತ ರೂಪಕಗಳು,
ಚಂದದ ಹೋಲಿಕೆಗಳಿಗೆ ಕನ್ನಡಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕನ್ನಡಿಯನ್ನು ಮನಸ್ಸು,
ಕಣ್ಣುಗಳಿಗೆ ಹೋಲಿಸುವದು ಸಾಮಾನ್ಯ. ಗಾದೆಗಳಲ್ಲೂ ಕನ್ನಡಿ ಬಳಕೆಯಾಗಿದೆ. ಉದಾಹರಣೆಗೆ
 "ಚೂರಾದ ಕನ್ನಡಿ; ಒಡೆದ ಮನಸು ಮತ್ತೆ ಸರಿಯಾಗದು" , "ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?" ಮುಂತಾದವು.

ಗಾಜನ್ನು ಕನ್ನಡಿಯ ಸೋದರಿಯೆನ್ನಬಹುದು. ಇತ್ತೀಚಿಗೆ ಎಲ್ಲೆಡೆ ಗಾಜಿನ ಕಟ್ಟಡಗಳು ತಲೆಯೆತ್ತುತ್ತಿವೆ.
ಎಲ್ಲೆಡೆ ಗಾಜಿನ ಬಾಗಿಲು, ಲೋಟ, ಟೀಪಾಯಿ ಹೀಗೆ ಎಲ್ಲವೂ ಗಾಜುಮಯವಾಗುತ್ತಿದೆ.
ಗಾಜಿನ ಅಪ್ರತಿಮ ನೋಟವೆ ಅದರ ಜನಪ್ರಿಯತೆಗೆ ಕಾರಣ. ಕನ್ನಡ ಹಾಗೂ ಕನ್ನಡಿಗೆ ಒಂದು ಸ್ವರ ಮಾತ್ರ
ವ್ಯತ್ಯಾಸ. ಕನ್ನಡವೂ ಕನ್ನಡಿಯಂತೆ ಸುಂದರ, ಅಪ್ರತಿಮ. ಕನ್ನಡಿಯಂತೆ ಜನಪ್ರಿಯವಾಗಬೇಕಿದೆ. 
 ಇನ್ನು ಕನ್ನಡಕವನ್ನು ತೆಗೆದುಕೊಂಡರೆ,ಅದನ್ನೂ ಕನ್ನಡಿ ಎನ್ನುವುದುಂಟು. 
 ಅಲ್ಲದೆ ಕಣ್ಣಿನೊಳಗೆ ಹಾಕುವ contact lenses ಕೂಡ ಕನ್ನಡಿಯೇ..

ನಾವೆಲ್ಲಾ ಕನ್ನಡಿಯೆದೆರು ನಿಂತು ನಮ್ಮ ಸಂತೋಷ ದುಖಗಳನ್ನು ಹೇಳಿಕೊಂಡಿರುತ್ತೇವೆ.
ನಮ್ಮೆಲ್ಲ ಸತ್ಯ ಹುಳುಕುಗಳನ್ನು ತಿಳಿದ ಕನ್ನಡಿ ನಿಜ ಸ್ನೇಹಿತನಾಗಬಲ್ಲುದು.
ನಮ್ಮ ಆತ್ಮಾವಲೋಕನಕ್ಕೆ ಪ್ರೇರಕವಾಗಬಹುದು. ಕನ್ನಡಿ ನೋಡುತ್ತಾ ನಿಂತರೆ ಹೊಸ ಹೊಸ
ಹೊಳಹುಗಳು ಮೂಡಬಹುದು. ಪ್ರಯತ್ನಿಸಿ ನೋಡಿ. 

25 February 2011

ಸಾಗರ

ಇತ್ತೀಚಿಗೆ ಕುಂದಾಪುರದ ಸಮುದ್ರ ತೀರವೊಂದಕ್ಕೆ ಭೇಟಿ ನೀಡಿದೆ. ಸಮುದ್ರವೆಂಬ ನಿತ್ಯ ನಿರಂತರ ಸುಂದರ ಕಾವ್ಯದ ಮುಂದೆ
ಇದೊಂದು ಸಣ್ಣ ಹನಿ.
-----------------
ಮಿರಿ ಮಿರಿ ಮಿರುಗುವ ಮರಳ ರಾಶಿ.
ಕಣ್ಣ ತುಂಬುವ ನೀಲಿ; ಎದುರಲಿ

ನನ್ನುಸಿರ ತಾಳಕೆ ತೆರೆಗಳು ಮೊರೆ ಮೊರೆದು
ಅಥವಾ ನನ್ನೆದೆ, ತೆರೆಗಳ ಗಾನದ ಲಯ ಹಿಡಿದು
ಒಮ್ಮೆ ಪ್ರೀತಿಯ ಹೊಡೆತ, ಒಮ್ಮೆ ಜೋರು ಒದೆತ,
ಒಮ್ಮೆ ಮೌನ, ಒಮ್ಮೆ ಗಾನ..
ಮಡಿಲಲ್ಲಿ ಮಲಗಿಸಿಕೊಂಡ ಅಮ್ಮನಂತೆ.
 
ಅಲೆ ಅಲೆಯಲಿ ಅನಂತ ದಾಹ,
ರಣೋತ್ಸಾಹ, ತೀರದ ಮೋಹ!!!
ನನ್ನ ಕನ್ನಡಕದ ಮೇಲೆ ಹರಳುಗಟ್ಟಿದೆ ಉಪ್ಪು...
ಮಿದುಳು ಕೋಶದೊಳಗೆಲ್ಲೋ ಗೂಡು ಕಟ್ಟಿದೆ  ನೆನಪು!
-------------------- 

06 February 2011

ನಗದೇ...

ಈ ಹನಿಗಳ ಮೂಲ ನಂಗೊತ್ತಿಲ್ಲ.. ಆದರೆ ನನಗೆ ಮಜಾ ಕೊಟ್ಟ ಚಟಾಕಿಗಳಿವು.
--------
ಆರೋಗ್ಯವಾಗಿ ಸಂತೋಷವಾಗಿ ಬಾಳಲು
ನಗದೆ ಇರಬಾರದು.
ಆದರೆ ಸುಖವಾಗಿ ನೆಮ್ಮದಿಯಾಗಿ ಬಾಳಲು
ನಗದೇ ಇರಬೇಕು!
----------
ಕವಿಗಳು ಮಾಡುತ್ತಿದ್ದರು ಕಾವ್ಯವಾಚನ.
ಜನರು ನೋಡುತ್ತಿದ್ದರು ಕೈಯವಾಚ್ನ!

01 February 2011

ಇನ್ನೆರಡು ಚಟಾಕಿ

ಕ್ರಿಕೆಟ್ ವಿಶ್ವಕಪ್ ಹತ್ತಿರ ಬರುತಿದೆ. ಈ ಸಂದರ್ಭದಲ್ಲಿ ಈ ಹನಿ ಸೂಕ್ತವೆನಿಸಿತು..
----
ನಮ್ಮ ದೇಶದಿ ಹಾಕಿ, ಟೆನಿಸ್, ಕ್ರಿಕೆಟ್ಟಿದೆ
ಕ್ರಿಕೆಟ್ ಒಂದ ಬಿಟ್ಟು ಮತ್ತೆಲ್ಲವೂ ಕೆಟ್ಟಿದೆ!
-----
ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಸಮ್ಮೇಳನ ಯಶಸ್ವಿಯಾಗಲಿ,
ಕನ್ನಡದ ಕಂಪು ಎಲ್ಲೆಲ್ಲು ಹರಡಲಿ. 
ಕನ್ನಡದ ಪ್ರೇಮಿಯೊಬ್ಬ ತನ್ನವಳ ವರ್ಣಿಸುವ ಈ ಹನಿ ನಿಮಗೆ ಖುಷಿ ನೀಡಲಿ..
-----
ನಿನ್ನ ಮನ ಗಣಿತ
ನಿನ್ನ ಕೋಪ ಇಂಗ್ಲಿಷ್
ನಿನ್ನ ಬೇಸರ ವಿಜ್ಞಾನ 
ನಿನ್ನ ನಗು-ಮೊಗ ಸವಿಗನ್ನಡ


ಪ್ರೇಮ ನಿವೇದನೆ

ಪ್ರೇಮ ನಿವೇದನೆಯೊ೦ದರ ವಿಭಿನ್ನ ನಿರೂಪಣೆ.
ಸ೦ಜೆಗತ್ತಲು  ಮಬ್ಬು
ನಿಧಾನವಾಗಿ  ತು೦ಬುತಿದೆ ಪಬ್ಬು
ಭುವಿಯ ಎದೆಯಲ್ಲಿ ಬಿಸಿಯ ನಂಜು
ಸುತ್ತೆಲ್ಲೂ ಹೊತ್ತಿಲ್ಲ ಕತ್ತಲ ಪಂಜು

ನನ್ನ ಮಾತೆಲ್ಲ ಮುಗಿದು
ಕತ್ತಲು, ಕಾರ್ಮೋಡ ಕವಿದು
ಬಿಳುಪಾಯ್ತು ಕಪ್ಪು ಮೋಡದ ಅಂಚು
ನಿನ್ನ ಬೆರಳಲ್ಲಿ ನನ್ನ ಉಂಗುರದ ಮಿಂಚು
ಮಳೆ ಸುರಿದು, ಇಳೆ ತಣಿದು
ಶುರುವಾಯ್ತು ಪ್ರಣಯ.





19 January 2011

ಕನಸು

ಹೀಗೊಂದು ಕನಸು ಬಿತ್ತೆನಗೆ...
ಓದಿ ನೋಡಿ; ಖುಷಿಯಾಗಬಹುದು ನಿಮಗೆ.
-----
ಅವಳ ಕಣ್ಣ ಕಾಂತಿಯು
ನನ್ನೆದೆಯ ಗೋಡೆಯ ಸೀಳಿ
ಹೃದಯದೊಳಗೆಲ್ಲ ಹರಡಿತು ಬೆಳ್ಳಿ ಬೆಳದಿಂಗಳ..
ಆ ಬೆಳಕಲಿ ಕಂಡೆನವಳ
ಮೊಗವ, ಆ ಮುದ್ದು ನಗುವ
ಕಣ್ಣು ಮಿಟುಕಿಸಿ, ತೆರೆದು ನೋಡಲು ಬೆಳಗು ಮೂಡಿದೆ ಜಗದೊಳು..
ಛೆ! ಮತ್ತೆ ಕತ್ತಲು ಮನದೊಳು...

15 January 2011

some ಕ್ರಾಂತಿ

ಎಲ್ಲರಿಗೂ ವರ್ಷದ ಮೊದಲ ಹಬ್ಬ, ಸಂಕ್ರಾಂತಿಯ ಶುಭಾಷಯಗಳು.
ವರ್ಷದ ಮೊದಲಲ್ಲಿ ಮಾಡುವೆವು ಪ್ರತಿಜ್ಞೆ
ಮಾಡಬೇಕು some ಕ್ರಾಂತಿ.
ಆದರೆ ಕೊನೆಗೆ ಆಗುವುದು ಬರೇ ಸಂಕ್ರಾಂತಿ!
ಈ ಬಾರಿ ಹೀಗಾಗದಿರಲಿ, ಎಲ್ಲರ ಸಂಕಲ್ಪ ಹಾಗು ಬಯಕೆಗಳು ಈಡೇರಲಿ..